FLASH NEWS
Friday 16 December 2022
Monday 12 December 2022
ಶಾಲಾ ಹಳೆ ವಿದ್ಯಾರ್ಥಿಯಿಂದ ಮಕ್ಕಳಿಗೆ ವಿಶೇಷ ಭೋಜನ
ನಮ್ಮ ಕುಳೂರು ಶಾಲಾ ಹಳೆ ವಿದ್ಯಾರ್ಥಿಯಾದ ಶ್ರೀಯುತ ಮಾಧವ ಕುಳೂರುರವರು ಇಂದು ತಮ್ಮ ಮನೆಯ ಗೃಹ ಪ್ರವೇಶದ ಪ್ರಯುಕ್ತ ಶಾಲಾ ಮಕ್ಕಳಿಗೆ ವಿಶೇಷ ಭೋಜನದ ವ್ಯವಸ್ಥೆ ಮಾಡಿದರು. ಭೂರಿ ಭೋಜನದ ಜೊತೆಗೆ ಪಾಯಸ, ಹೋಳಿಗೆ ಮೊದಲಾದವುಗಳನ್ನು ಖುದ್ದಾಗಿ ಶಾಲೆಗೆ ಬಂದು ಮಕ್ಕಳಿಗೆ ಬಡಿಸುವುದರೊಂದಿಗೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.
ಇವರಿಗೆ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದದ ಪರವಾಗಿ ತುಂಬು ಹೃದಯದ ಅಭಿನಂದನೆ ಹಾಗೂ ಧನ್ಯವಾದಗಳನ್ನು ಅರ್ಪಿಸಲಾಯಿತು.
Sunday 11 December 2022
ಶತಮಾನೋತ್ಸವ ಸ್ವಾಗತ ಸಮಿತಿ ರೂಪೀಕರಣ ಸಭೆ
ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು ಶತಮಾನೋತ್ಸವದ ಅಂಚಿನಲ್ಲಿದ್ದು, ಇದರಂಗವಾಗಿ ಶತಮಾನೋತ್ಸವ ಸ್ವಾಗತ ಸಮಿತಿ ರೂಪೀಕರಣ ಸಭೆಯು ಇಂದು ನಡೆಯಿತು.
ಕಾರ್ಯಕ್ರಮವನ್ನು ವಾರ್ಡ್ ಸದಸ್ಯರಾದ ಜನಾರ್ದನ ಪೂಜಾರಿ ಉದ್ಘಾಟಿಸಿದರು. ಶಾಲಾ ಮುಖ್ಯ ಶಿಕ್ಷಕರಾದ ಸತ್ಯನಾರಾಯಣ ಶರ್ಮ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಸತೀಶ್ ಎಲಿಯಾಣ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಹಾಜಿ ಕಂಚಿಲ, ಕಂಬಳ ಸಮಿತಿಯ ಮಾಜಿ ಅಧ್ಯಕ್ಷರಾದ ಪಿ. ಆರ್. ಶೆಟ್ಟಿ ಪೊಯ್ಯೇಲ್, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ ಉಪಸ್ಥಿತರಿದ್ದರು.
ಬಳಿಕ ಶತಮಾನೋತ್ಸವದ ಸ್ವಾಗತ ಸಮಿತಿ ರೂಪೀಕರಣ ನಡೆಯಿತು. ಪ್ರಧಾನ ಸಮಿತಿಯೊಂದಿಗೆ ವಿವಿಧ ಉಪ ಸಮಿತಿಗಳನ್ನು ರಚಿಸಲಾಯಿತು.
ಶಾಲಾ ಶಿಕ್ಷಕಿ ಸೌಮ್ಯ ಪಿ ಸ್ವಾಗತಿಸಿ, ಶಿಕ್ಷಕಿ ನಯನ ಎಂ ವಂದಿಸಿದರು. ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯಕ್ರಮ ನಿರೂಪಿಸಿದರು.
Friday 2 December 2022
ಹಳೆ ವಿದ್ಯಾರ್ಥಿ ಸಂಘದ ಕಾರ್ಯಕಾರಿ ಸಮಿತಿ ಸಭೆ
ಶತಮಾನೋತ್ಸವ ಆಚರಣೆಯ ಭಾಗವಾಗಿ ಸ್ವಾಗತ ಸಮಿತಿ ರೂಪೀಕರಣದ ರಚನೆಯ ಬಗ್ಗೆ ಚರ್ಚಿಸಲು ಹಳೆ ವಿದ್ಯಾರ್ಥಿ ಸಂಘದ ಕಾರ್ಯಕಾರಿ ಸಮಿತಿಯ ಸಭೆಯನ್ನು ಇಂದು ನಡೆಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಹಾಜಿ ಕಂಚಿಲ ವಹಿಸಿದ್ದರು. ಸ್ವಾಗತ ಸಮಿತಿ ರೂಪೀಕರಣದ ರಚನೆಯ ಬಗ್ಗೆ ಚರ್ಚೆ ನಡೆಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ರವರು ಈ ಬಗ್ಗೆ ಮಾಹಿತಿ ನೀಡಿದರು.
ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಜಯರಾಜ್ ಶೆಟ್ಟಿ ಚಾರ್ಲ ಸ್ವಾಗತಿಸಿ, ಕೋಶಾಧಿಕಾರಿ ಸುಧಾಕರ ಶೆಟ್ಟಿ ಎಲಿಯಾಣ ವಂದಿಸಿದರು.
ಅಂತರ ರಾಷ್ಟ್ರೀಯ ವಿಶೇಷ ಚೇತನ ಮಕ್ಕಳ ದಿನಾಚರಣೆ; ವಾರಾಚರಣೆಯ ಅಂಗವಾಗಿ ಮ್ಯಾರಥಾನ್ ಓಟ
ಭಿನ್ನ ಸಾಮರ್ಥ್ಯ, ವಿಶೇಷ ಚೇತನ ಮಕ್ಕಳನ್ನು ಮುಖ್ಯ ವಾಹಿನಿಗೆ ತರುವುದು ಅತೀ ಅಗತ್ಯವಾಗಿದೆ. ಇದರಂಗವಾಗಿ ಅಂತರ ರಾಷ್ಟ್ರೀಯ ವಿಶೇಷ ಚೇತನ ಮಕ್ಕಳ ದಿನಾಚರಣೆಯನ್ನು ಒಂದು ವಾರದ ಆಚರಣೆಯಾಗಿ ಅಚರಿಸಲಾಗುತ್ತಿದೆ.
ಆ ಪ್ರಯುಕ್ತ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮ್ಯಾರಥಾನ್ ಓಟ ನಡೆಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ರವರು ಮಕ್ಕಳಿಗೆ ದಿನ ವಿಶೇಷವನ್ನು ತಿಳಿಸಿದರು. ಬಳಿಕ ಮಕ್ಕಳು ಹಾಗೂ ಶಾಲಾ ಅಧ್ಯಾಪಕ ವೃಂದ ಮ್ಯಾರಥಾನ್ ಓಟ ನಡೆಸಿದರು.
Sunday 27 November 2022
ಶಾಲಾ ಶತಮಾನೋತ್ಸವ ಸ್ವಾಗತ ಸಮಿತಿ ರೂಪೀಕರಣದ ಪೂರ್ವಭಾವಿ ಸಭೆ
ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು ಶತಮಾನೋತ್ಸವ ಆಚರಣೆಯ ಹೊಸ್ತಿಲಲ್ಲಿದ್ದು ಆ ಪ್ರಯುಕ್ತ ಇದೇ ಬರುವ ಡಿಸೆಂಬರ್ 11 ನೇ ಆದಿತ್ಯವಾರದಂದು ನಡೆಯುವ ಶತಮಾನೋತ್ಸವ ಸ್ವಾಗತ ಸಮಿತಿ ರೂಪೀಕರಣ ಸಭೆಯ ಪೂರ್ವಭಾವಿಯಾಗಿ ಇಂದು ಶಾಲಾ ಹಳೆ ವಿದ್ಯಾರ್ಥಿ ಸಂಘದ ಕಾರ್ಯಕಾರಿ ಸಮಿತಿ ಸಭೆಯನ್ನು ಕರೆಯಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಹಾಜಿ ಕಂಚಿಲ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತ್ಯನಾರಾಯಣ ಶರ್ಮ ರವರು ಸ್ವಾಗತ ಸಮಿತಿ ರೂಪೀಕರಣದ ರಚನೆಯ ಬಗ್ಗೆ ಮಾಹಿತಿ ನೀಡಿದರು. ಚರ್ಚೆಯಲ್ಲಿ ಸದಸ್ಯರು ಹಲವು ಸಲಹೆ ಸೂಚನೆಗಳನ್ನು ಇತ್ತರು.
ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಜಯರಾಜ್ ಶೆಟ್ಟಿ ಚಾರ್ಲ ಸ್ವಾಗತಿಸಿ, ವಂದಿಸಿದರು.
Friday 25 November 2022
Friday 18 November 2022
Monday 14 November 2022
ವಾಚನಾ ಮಿತ್ರತ್ವ ; ರಕ್ಷಕರಿಂದ ವಿವಿಧ ಚಟುವಟಿಕೆ
ಶಾಲಾ ಮಕ್ಕಳಲ್ಲಿ ಪುಸ್ತಕ ಓದಿನ ಕಡೆಗೆ ಒಲವು ಮೂಡಿಸುವ ಉದ್ದೇಶದಿಂದ ವಾಚನಾ ಮಿತ್ರತ್ವ ಎಂಬ ಶಾಲಾ ಮಟ್ಟದ ವಿನೂತನ ಕಾರ್ಯಕ್ರಮವು ನಮ್ಮ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಕ್ಕಳ ಜೊತೆಗೆ ರಕ್ಷಕರಿಗೆ ವಿವಿಧ ಚಟುವಟಿಕೆಗಳನ್ನು ನಡೆಸಲಾಯಿತು. ಆಯಾ ತರಗತಿಯ ಚಟುವಟಿಕೆಗಳನ್ನು ಮಕ್ಕಳು ಪ್ರದರ್ಶಿಸಿದರು. ನಂತರ ರಕ್ಷಕರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶವನ್ನು ನೀಡಲಾಯಿತು. ರಕ್ಷಕರು ವಿವಿಧ ರೀತಿಯ ಸಾಹಿತ್ಯಿಕ ಕೃತಿಗಳನ್ನು ರಚಿಸಿ ಪ್ರದರ್ಶಿಸಿದರು.
ರಕ್ಷಕರ ಉತ್ಪನ್ನಗಳನ್ನು ಹಸ್ತ ಪತ್ರಿಕೆ ಮಾಡಲಾಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಪೊಯ್ಯೆಲ್ ರವರು 'ಸೃಷ್ಟಿ' ಹಸ್ತ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಮಾತೃ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಸುನಿತಾ ಕುಳೂರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಾಲಾ ಸಿಬ್ಬಂದಿ ವಿನೋದ್ ಕುಮಾರ್ ರವರು ತಾವು ತಂದಿದ್ದ ಫ್ಯಾಷನ್ ಫ್ರೂಟ್ ಗಿಡಗಳನ್ನು ಎಲ್ಲಾ ಮಕ್ಕಳಿಗೆ ನೀಡಿ ಗಮನ ಸೆಳೆದರು. ಶಾಲಾ ಶಿಕ್ಷಕಿ ನಯನ ಎಂ ಸ್ವಾಗತಿಸಿ, ಶಿಕ್ಷಕಿ ಚೇತನ ವಂದಿಸಿದರು. ಶಿಕ್ಷಕಿ ಸೌಮ್ಯ ಪಿ ಕಾರ್ಯಕ್ರಮ ನಡೆಸಿಕೊಟ್ಟರು.
ಮೇಳೈಸಿದ ಮಕ್ಕಳ ದಿನಾಚರಣೆ:
ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯು ಸಂಭ್ರಮದಿಂದ ನಡೆಯಿತು.
ಕಾರ್ಯಕ್ರಮವನ್ನು ವಾರ್ಡ್ ಸದಸ್ಯರಾದ ಜನಾರ್ದನ ಪೂಜಾರಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಸತೀಶ್ ಎಲಿಯಾಣ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಹಾಜಿ ಕಂಚಿಲ ಉಪಸ್ಥಿತರಿದ್ದರು. ಶಾಲಾ ಮಾತೃ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಸುನಿತಾ ಕುಳೂರು, ಪ್ರೀ ಪ್ರೈಮರಿ ವಿಭಾಗದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಸುಹಾಸಿನಿ ಕುಳೂರು, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಕೃಷ್ಣವೇಣಿ ಪಾದೆ ಕುಳೂರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಇದೇ ವೇಳೆ ಮಂಜೇಶ್ವರ ಉಪಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ಮಿಂಚಿದ ಪ್ರತಿಭೆಗಳಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಜೊತೆಗೆ ಮಕ್ಕಳ ದಿನಾಚರಣೆಯ ಅಂಗವಾಗಿ ನಡೆಸಿದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಶಾಲಾ ಮುಖ್ಯ ಶಿಕ್ಷಕರಾದ ಸತ್ಯನಾರಾಯಣ ಶರ್ಮರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಜಯರಾಜ್ ಶೆಟ್ಟಿ ಚಾರ್ಲ ಸ್ವಾಗತಿಸಿ, ಶಾಲಾ ಶಿಕ್ಷಕಿ ಸೌಮ್ಯ ಪಿ ವಂದಿಸಿದರು. ಶಾಲಾ ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಶಾಲಾ ರಕ್ಷಕ-ಶಿಕ್ಷಕ ಸಂಘದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶಾಲಾ ಮಕ್ಕಳು ತಮ್ಮ ಹೆತ್ತವರು ಹಾಗೂ ಅಧ್ಯಾಪಕರು ಪ್ರದರ್ಶಿಸಿದ ವೈವಿಧ್ಯಮಯ ಕಾರ್ಯಕ್ರಮವನ್ನು ನೋಡಿ ಆನಂದಿಸಿ ಸಂಭ್ರಮ ಪಟ್ಟರು. ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶವನ್ನು ಹೊತ್ತು ತಂದ ರಕ್ಷಕ-ಶಿಕ್ಷಕ ಸಂಘದ ಸದಸ್ಯರು ಅಭಿನಯಿಸಿದ ತುಳು ಹಾಸ್ಯಮಯ ಕಿರು ನಾಟಕ 'ಗೋಸ್ಬರಿ' ಎಲ್ಲರ ಮನ ಸೂರೆಗೊಂಡಿತು. ಶಾಲಾ ಹಳೆ ವಿದ್ಯಾರ್ಥಿಗಳು ಹಾಗೂ ರಕ್ಷಕರು ಸಹಕರಿಸಿದರು.
ಪ್ರತೀ ವರ್ಷ ಮಕ್ಕಳ ದಿನಾಚರಣೆಯಂದು ಮಕ್ಕಳು ಕಾರ್ಯಕ್ರಮ ನೀಡುತ್ತಿದ್ದು, ಈ ವರ್ಷ ಮಕ್ಕಳ ಹೆತ್ತವರು ಹಾಗೂ ಶಿಕ್ಷಕ ವೃಂದ ವಿಭಿನ್ನ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವುದರ ಮೂಲಕ ಮಕ್ಕಳ ಮನಸ್ಸನ್ನು ಗೆದ್ದು, ಮಕ್ಕಳ ದಿನಾಚರಣೆಗೆ ಇನ್ನಷ್ಟು ಮೆರುಗನ್ನು ನೀಡಿದರು.