FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Sunday 27 November 2022

ಶಾಲಾ ಶತಮಾನೋತ್ಸವ ಸ್ವಾಗತ ಸಮಿತಿ ರೂಪೀಕರಣದ ಪೂರ್ವಭಾವಿ ಸಭೆ

            ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು ಶತಮಾನೋತ್ಸವ ಆಚರಣೆಯ ಹೊಸ್ತಿಲಲ್ಲಿದ್ದು  ಆ ಪ್ರಯುಕ್ತ ಇದೇ ಬರುವ ಡಿಸೆಂಬರ್ 11 ನೇ ಆದಿತ್ಯವಾರದಂದು ನಡೆಯುವ ಶತಮಾನೋತ್ಸವ ಸ್ವಾಗತ ಸಮಿತಿ ರೂಪೀಕರಣ ಸಭೆಯ ಪೂರ್ವಭಾವಿಯಾಗಿ ಇಂದು ಶಾಲಾ ಹಳೆ ವಿದ್ಯಾರ್ಥಿ ಸಂಘದ ಕಾರ್ಯಕಾರಿ ಸಮಿತಿ ಸಭೆಯನ್ನು ಕರೆಯಲಾಯಿತು. 

         ಸಭೆಯ ಅಧ್ಯಕ್ಷತೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಹಾಜಿ ಕಂಚಿಲ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತ್ಯನಾರಾಯಣ ಶರ್ಮ ರವರು ಸ್ವಾಗತ ಸಮಿತಿ ರೂಪೀಕರಣದ ರಚನೆಯ ಬಗ್ಗೆ ಮಾಹಿತಿ ನೀಡಿದರು. ಚರ್ಚೆಯಲ್ಲಿ ಸದಸ್ಯರು ಹಲವು ಸಲಹೆ ಸೂಚನೆಗಳನ್ನು ಇತ್ತರು.

          ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಜಯರಾಜ್ ಶೆಟ್ಟಿ ಚಾರ್ಲ ಸ್ವಾಗತಿಸಿ, ವಂದಿಸಿದರು.





Monday 14 November 2022

ವಾಚನಾ ಮಿತ್ರತ್ವ ; ರಕ್ಷಕರಿಂದ ವಿವಿಧ ಚಟುವಟಿಕೆ

            ಶಾಲಾ ಮಕ್ಕಳಲ್ಲಿ ಪುಸ್ತಕ ಓದಿನ ಕಡೆಗೆ ಒಲವು ಮೂಡಿಸುವ ಉದ್ದೇಶದಿಂದ ವಾಚನಾ ಮಿತ್ರತ್ವ ಎಂಬ ಶಾಲಾ ಮಟ್ಟದ ವಿನೂತನ ಕಾರ್ಯಕ್ರಮವು ನಮ್ಮ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

           ಕಾರ್ಯಕ್ರಮದಲ್ಲಿ ಮಕ್ಕಳ ಜೊತೆಗೆ ರಕ್ಷಕರಿಗೆ ವಿವಿಧ ಚಟುವಟಿಕೆಗಳನ್ನು ನಡೆಸಲಾಯಿತು. ಆಯಾ ತರಗತಿಯ ಚಟುವಟಿಕೆಗಳನ್ನು ಮಕ್ಕಳು ಪ್ರದರ್ಶಿಸಿದರು. ನಂತರ ರಕ್ಷಕರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶವನ್ನು ನೀಡಲಾಯಿತು. ರಕ್ಷಕರು ವಿವಿಧ ರೀತಿಯ ಸಾಹಿತ್ಯಿಕ ಕೃತಿಗಳನ್ನು ರಚಿಸಿ ಪ್ರದರ್ಶಿಸಿದರು.

           ರಕ್ಷಕರ ಉತ್ಪನ್ನಗಳನ್ನು ಹಸ್ತ ಪತ್ರಿಕೆ ಮಾಡಲಾಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಪೊಯ್ಯೆಲ್ ರವರು 'ಸೃಷ್ಟಿ' ಹಸ್ತ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಮಾತೃ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಸುನಿತಾ ಕುಳೂರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಾಲಾ ಸಿಬ್ಬಂದಿ ವಿನೋದ್ ಕುಮಾರ್ ರವರು ತಾವು ತಂದಿದ್ದ ಫ್ಯಾಷನ್ ಫ್ರೂಟ್ ಗಿಡಗಳನ್ನು ಎಲ್ಲಾ ಮಕ್ಕಳಿಗೆ ನೀಡಿ ಗಮನ ಸೆಳೆದರು. ಶಾಲಾ ಶಿಕ್ಷಕಿ ನಯನ ಎಂ ಸ್ವಾಗತಿಸಿ, ಶಿಕ್ಷಕಿ ಚೇತನ ವಂದಿಸಿದರು. ಶಿಕ್ಷಕಿ ಸೌಮ್ಯ ಪಿ ಕಾರ್ಯಕ್ರಮ ನಡೆಸಿಕೊಟ್ಟರು.

 





















ಮೇಳೈಸಿದ ಮಕ್ಕಳ ದಿನಾಚರಣೆ:

           ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯು ಸಂಭ್ರಮದಿಂದ ನಡೆಯಿತು.

           ಕಾರ್ಯಕ್ರಮವನ್ನು ವಾರ್ಡ್ ಸದಸ್ಯರಾದ ಜನಾರ್ದನ ಪೂಜಾರಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಸತೀಶ್ ಎಲಿಯಾಣ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಹಾಜಿ ಕಂಚಿಲ ಉಪಸ್ಥಿತರಿದ್ದರು. ಶಾಲಾ ಮಾತೃ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಸುನಿತಾ ಕುಳೂರು, ಪ್ರೀ ಪ್ರೈಮರಿ ವಿಭಾಗದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಸುಹಾಸಿನಿ ಕುಳೂರು, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಕೃಷ್ಣವೇಣಿ ಪಾದೆ ಕುಳೂರು ಉಪಸ್ಥಿತರಿದ್ದು ಶುಭ ಹಾರೈಸಿದರು.

         ಇದೇ ವೇಳೆ ಮಂಜೇಶ್ವರ ಉಪಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ಮಿಂಚಿದ ಪ್ರತಿಭೆಗಳಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಜೊತೆಗೆ ಮಕ್ಕಳ ದಿನಾಚರಣೆಯ ಅಂಗವಾಗಿ ನಡೆಸಿದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಶಾಲಾ ಮುಖ್ಯ ಶಿಕ್ಷಕರಾದ ಸತ್ಯನಾರಾಯಣ ಶರ್ಮರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಜಯರಾಜ್ ಶೆಟ್ಟಿ ಚಾರ್ಲ ಸ್ವಾಗತಿಸಿ, ಶಾಲಾ ಶಿಕ್ಷಕಿ ಸೌಮ್ಯ ಪಿ ವಂದಿಸಿದರು. ಶಾಲಾ ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯಕ್ರಮ ನಿರೂಪಿಸಿದರು. 

        ಬಳಿಕ ಶಾಲಾ ರಕ್ಷಕ-ಶಿಕ್ಷಕ ಸಂಘದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶಾಲಾ ಮಕ್ಕಳು ತಮ್ಮ ಹೆತ್ತವರು ಹಾಗೂ ಅಧ್ಯಾಪಕರು ಪ್ರದರ್ಶಿಸಿದ ವೈವಿಧ್ಯಮಯ ಕಾರ್ಯಕ್ರಮವನ್ನು ನೋಡಿ ಆನಂದಿಸಿ ಸಂಭ್ರಮ ಪಟ್ಟರು. ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶವನ್ನು ಹೊತ್ತು ತಂದ ರಕ್ಷಕ-ಶಿಕ್ಷಕ ಸಂಘದ ಸದಸ್ಯರು ಅಭಿನಯಿಸಿದ ತುಳು ಹಾಸ್ಯಮಯ ಕಿರು ನಾಟಕ 'ಗೋಸ್ಬರಿ' ಎಲ್ಲರ ಮನ ಸೂರೆಗೊಂಡಿತು. ಶಾಲಾ ಹಳೆ ವಿದ್ಯಾರ್ಥಿಗಳು ಹಾಗೂ ರಕ್ಷಕರು ಸಹಕರಿಸಿದರು.

          ಪ್ರತೀ ವರ್ಷ ಮಕ್ಕಳ ದಿನಾಚರಣೆಯಂದು ಮಕ್ಕಳು ಕಾರ್ಯಕ್ರಮ ನೀಡುತ್ತಿದ್ದು, ಈ ವರ್ಷ ಮಕ್ಕಳ ಹೆತ್ತವರು ಹಾಗೂ ಶಿಕ್ಷಕ ವೃಂದ ವಿಭಿನ್ನ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವುದರ ಮೂಲಕ ಮಕ್ಕಳ ಮನಸ್ಸನ್ನು ಗೆದ್ದು, ಮಕ್ಕಳ ದಿನಾಚರಣೆಗೆ ಇನ್ನಷ್ಟು ಮೆರುಗನ್ನು ನೀಡಿದರು.