ಕುಳೂರಿನಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ನಾಯಕನ ಆಯ್ಕೆಯನ್ನು ಮಕ್ಕಳ ಶಾಲಾ ಚುನಾವಣೆಯನ್ನು ನಡೆಸುವ ಮೂಲಕ ಪ್ರಜಾಪ್ರಭುತ್ವ ರೀತಿಯ ಆಡಳಿತವನ್ನು ಪರಿಚಯಿಸಲಾಯಿತು. ಚುನಾವಣೆಯ ಮುನ್ನಾ ದಿನ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ನಾಮಪತ್ರವನ್ನು ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಗಣೇಶ್ ರಾವ್ ರವರಿಗೆ ಸಲ್ಲಿಸಿದರು. ಮರುದಿನ ನಡೆದ ಚುನಾವಣೆಯಲ್ಲಿ ಮತದಾರರು ಸರದಿ ಸಾಲಿನಲ್ಲಿ ಬಂದು ಚುನಾವಣಾ ಗುರುತನ್ನು ಕೈ ಬೆರಳಿಗೆ ಹಾಕಿಸಿ ತಮ್ಮ ನೆಚ್ಚಿನ ಅಭ್ಯರ್ಥಿಗೆ ಗುಪ್ತ ಮತದಾನದ ಮೂಲಕ ಮತ ಚಲಾಯಿಸಿದರು. ಚುನಾವಣೆಯ ಎಲ್ಲಾ ಪ್ರಕ್ರಿಯೆಯನ್ನು ಶಾಲಾ ಮಕ್ಕಳೇ ನಿರ್ವಹಿಸಿದ್ದು ವಿಶೇಷವಾಗಿತ್ತು. ಬಳಿಕ ಮುಖ್ಯ ಚುನಾವಣಾಧಿಕಾರಿಯ ನೇತೃತ್ವದಲ್ಲಿ ಮತ ಎಣಿಕೆ ನಡೆಯಿತು. ಬಳಿಕ ಫಲಿತಾಂಶ ಘೋಷಣೆ ಆಗುತ್ತಿದ್ದಂತೆ ವಿಜೇತ ಅಭ್ಯರ್ಥಿಯ ಬೆಂಬಲಿಗರ ಉದ್ಘೋಷ ಮುಗಿಲು ಮುಟ್ಟಿತ್ತು. ವಿಜಯ ಯಾತ್ರೆಯನ್ನು ನಡೆಸುವ ಮೂಲಕ ಸಂಭ್ರಮಿಸಿದರು. ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಬೆಂಬಲಿಗರು ನಾಯಕನಾಗಿ ಆಯ್ಕೆಯಾದ ಜಿತಿನ್ ಕುಮಾರ್ ಹಾಗೂ ಉಪನಾಯಕಿಯಾಗಿ ಆಯ್ಕೆಯಾದ ಕುಮಾರಿ ಹರ್ಷಿತ ರವರಿಗೆ ಮಾಲೆ ಹಾಕಿ ಹೂಗುಚ್ಛ ನೀಡುವುದರ ಮೂಲಕ ಅಭಿನಂದಿಸಿದರು. ಬಳಿಕ ಆಯ್ಕೆಯಾದ ಅಭ್ಯರ್ಥಿಗಳ ಪ್ರಮಾಣ ವಚನವನ್ನು ಮುಖ್ಯೋಪಾಧ್ಯಾಯರು ಬೋಧಿಸಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದು ಸಹಕರಿಸಿದರು.
No comments:
Post a Comment