FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Thursday 1 June 2023

ಮೀಂಜ ಪಂಚಾಯತು ಮಟ್ಟದ ಶಾಲಾ ಪ್ರವೇಶೋತ್ಸವ :

           ಕೇರಳದ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳನ್ನು ಊರಿನ ಹೆಮ್ಮೆಯ ಕೇಂದ್ರಗಳನ್ನಾಗಿಸುವ ದೃಷ್ಟಿಯಿಂದ ಸಾರ್ವಜನಿಕರು ಶಾಲೆಗಳತ್ತ ಗಮನ ಸೆಳೆಯುವಂತೆ ಮಾಡಲು ಸರಕಾರವು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಅದರಂತೆ ಶಾಲಾರಂಭದ ದಿನವನ್ನು ಶಾಲಾ ಪ್ರವೇಶೋತ್ಸವ ಎಂಬ ಸಂಭ್ರಮದ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಈ ಸಂಬಂಧ ಮೀಂಜ ಪಂಚಾಯತು ಮಟ್ಟದ ಶಾಲಾ ಪ್ರವೇಶೋತ್ಸವವು ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮದಿಂದ ಜರಗಿತು.

       ಕಾರ್ಯಕ್ರಮದಂಗವಾಗಿ ನವಾಗತ ಮಕ್ಕಳನ್ನು ಚೆಂಡೆ ಮೇಳ, ಗೊಂಬೆ ಕುಣಿತದೊಂದಿಗೆ ಆಕರ್ಷಕ ಮೆರವಣಿಗೆಯ ಮೂಲಕ ಸ್ವಾಗತಿಸಲಾಯಿತು.

       ಕಾರ್ಯಕ್ರಮವನ್ನು ಮೀಂಜ ಪಂಚಾಯತು ಅಧ್ಯಕ್ಷೆ ಶ್ರೀಮತಿ ಸುಂದರಿ ಆರ್ ಶೆಟ್ಟಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ವಾರ್ಡ್ ಸದಸ್ಯರಾದ ಶ್ರೀ ಜನಾರ್ಧನ ಪೂಜಾರಿ ಕುಳೂರು ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಕಮಲಾಕ್ಷಿ, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯೆ ಶ್ರೀಮತಿ ಅಶ್ವಿನಿ ಎಂ. ಎಲ್ ಆಗಮಿಸಿದ್ದರು.

         ಈ ವರ್ಷದ ಶಾಲಾ ಅಕಾಡೆಮಿಕ್ ಮಾಸ್ಟರ್ ಪ್ಲಾನ್ 2023-24 ನ್ನು ಮೀಂಜ ಗ್ರಾಮ ಪಂಚಾಯತಿನ ವಿದ್ಯಾಭ್ಯಾಸ ಹಾಗೂ ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಶ್ರೀಮತಿ ಸರಸ್ವತಿ ಕೆ ಬಿಡುಗಡೆಗೊಳಿಸಿದರು.

         ಕಾರ್ಯಕ್ರಮದಲ್ಲಿ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ ಶ್ರೀಮತಿ ರುಖ್ಯಾ ಸಿದ್ದೀಕ್, ಸದಸ್ಯರಾದ ಶ್ರೀಮತಿ ಮಿಸ್ರಿಯ, ಶ್ರೀ ಅಬ್ದುಲ್ ರಜಾಕ್ ಎಂ, ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಸತೀಶ್ ಎಲಿಯಾಣ, ಮಾತೆಯರ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಸುನೀತಾ, ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಶ್ರೀ ಮೊಹಮ್ಮದ್ ಹಾಜಿ ಕಂಚಿಲ, ಕುಳೂರು ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ಸತ್ಯನಾರಾಯಣ ಶರ್ಮ ಪಿ, ಶಾಲಾಭಿವೃದ್ಧಿ ಸಮಿತಿ ಸದಸ್ಯ ಶ್ರೀ ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ, ಪ್ರೀ ಪ್ರೈಮರಿ ವಿಭಾಗದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಸುಹಾಸಿನಿ ಉಪಸ್ಥಿತರಿದ್ದರು. 

        ಇದೇ ಸಂದರ್ಭದಲ್ಲಿ ಗ್ರೀನ್ ಕ್ಯಾಂಪಸ್ ಯೋಜನೆಯ ಭಾಗವಾಗಿ ವಿವಿಧ ಕಾರ್ಯಕ್ರಮಗಳಲ್ಲಿ ಆಹಾರಕ್ಕಾಗಿ ಉಪಯೋಗಿಸುತ್ತಿದ್ದ ಪ್ಲಾಸ್ಟಿಕ್ ತಟ್ಟೆ, ಗ್ಲಾಸ್ ಗಳ ಉಪಯೋಗವನ್ನು ತಡೆಯಲು ಶಾಲಾ ಹಳೆ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಶ್ರೀ ಸುಧಾಕರ್ ಶೆಟ್ಟಿ ಎಲಿಯಾಣ ಹಾಗೂ ಶಾಲಾ ಶಿಕ್ಷಕಿ ಶ್ರೀಮತಿ ಅಶ್ವಿನಿ ಸುಧಾಕರ್ ಶೆಟ್ಟಿ ರವರು ತಮ್ಮ ಮಗಳಾದ ಕುಮಾರಿ ಸಾನ್ವಿ ಶೆಟ್ಟಿ ಯ ಹುಟ್ಟಿದ ಹಬ್ಬದ ನೆನಪಿಗಾಗಿ 200 ಸ್ಟೀಲ್ ಪ್ಲೇಟ್ ಹಾಗೂ ಸ್ಟೀಲ್ ಗ್ಲಾಸ್ ಗಳನ್ನು ಕೊಡುಗೆಯಾಗಿ ನೀಡಿದರು. ಜೊತೆಗೆ ಪ್ರೀ ಪ್ರೈಮರಿ ವಿಭಾಗದ ಮಕ್ಕಳಿಗೆ ಆಸನದ ವ್ಯವಸ್ಥೆಯಾಗಿ ಕುರ್ಚಿಗಳನ್ನು ಶಾಲಾ ಶತಮಾನೋತ್ಸವ ಸಮಿತಿಯ ಕೋಶಾಧಿಕಾರಿ ಶ್ರೀ ಚಿಕ್ಕಪ್ಪ ಶೆಟ್ಟಿ ಎಲಿಯಾಣ ಕೊಡುಗೆಯಾಗಿ ನೀಡಿದರು.

       ಪ್ರೀ ಪ್ರೈಮರಿ ಹಾಗೂ ಒಂದನೇ ತರಗತಿಯ ಮಕ್ಕಳಿಗೆ ಬ್ಯಾಗ್ ಗಳನ್ನು ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಸತೀಶ್ ಎಲಿಯಾಣ, ಪ್ರೀ ಪ್ರೈಮರಿ ವಿಭಾಗದ ಮಕ್ಕಳಿಗೆ ಪಾಠ ಪುಸ್ತಕಗಳನ್ನು ಶತಮಾನೋತ್ಸವ ಸಮಿತಿ ಪ್ರಚಾರ ಸಮಿತಿಯ ಅಧ್ಯಕ್ಷರಾದ ಶ್ರೀ ವಸಂತ ಪೂಜಾರಿ ಕುಳೂರು, ಪ್ರೀ ಪ್ರೈಮರಿ ಮಕ್ಕಳಿಗೆ ಸಮವಸ್ತ್ರವನ್ನು ಮಜಿಬೈಲು ಸಹಕಾರಿ ಬ್ಯಾಂಕ್ ನಿ. ಮಜಿಬೈಲು ಇವರು ಕೊಡುಗೆಯಾಗಿ ನೀಡಿದರು.

       ಉಳಿದಂತೆ ಮೆರವಣಿಗೆಗೆ ಇನ್ನಷ್ಟು ರಂಗು ತರಲು ಚೆಂಡೆಯ ವ್ಯವಸ್ಥೆಯನ್ನು ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಹಾಜಿ ಕಂಚಿಲ, ಗೊಂಬೆ ಕುಣಿತದ ವ್ಯವಸ್ಥೆಯನ್ನು ಶಾಲಾ ಮಾತೆಯರ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಸುನೀತಾ ಕುಳೂರು, ಸದಸ್ಯರಾದ ಶ್ರೀಮತಿ ಮೀನಾಕ್ಷಿ ಬೊಡ್ಡೋಡಿ, ಶ್ರೀಮತಿ ಹೇಮಲತ ಕುಳೂರು, ಸಿಹಿ ತಿಂಡಿಯ ವ್ಯವಸ್ಥೆಯನ್ನು ವಾರ್ಡ್ ಸದಸ್ಯರಾದ ಶ್ರೀ ಜನಾರ್ಧನ ಪೂಜಾರಿ ಕುಳೂರು, ಲಘು ಉಪಹಾರದ ವ್ಯವಸ್ಥೆಯನ್ನು ಶಾಲಾ ಶಿಕ್ಷಕ ವೃಂದ ನೀಡಿ ಸಹಕರಿಸಿದರು.

         ಶಾಲಾ ಮುಖ್ಯ ಶಿಕ್ಷಕರ ಚಾರ್ಜ್ ಹೊಂದಿರುವ ಶ್ರೀಮತಿ ಸೌಮ್ಯ ಪಿ ಸ್ವಾಗತಿಸಿ, ಶಿಕ್ಷಕ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ ವಂದಿಸಿದರು. ಶಿಕ್ಷಕಿ ಶ್ರೀಮತಿ ನಯನ ಸತೀಶ್ ಕಾರ್ಯಕ್ರಮ ನಿರೂಪಿಸಿದರು. 

       ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಪ್ರವೇಶೋತ್ಸವದ ವೀಡಿಯೋ ಪ್ರದರ್ಶನ ಮಾಡಲಾಯಿತು. ಬಳಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.
















































No comments:

Post a Comment